ಅಪರಾಧಮನಶ್ಯಾಸ್ತ್ರ	
	
ಕಾನೂನಿನ ಗುರುತರ ಉಲ್ಲಂಘನೆ ಅಪರಾಧವೆನಿಸಿಕೊಳ್ಳುವುದು. ಉಲ್ಲಂಘನೆ ಸಾಧಾರಣವಾಗಿದ್ದರೆ ಅಪರಾಧವಾಗುವುದಿಲ್ಲ: ಅದನ್ನು ಆಗ ತಪ್ಪು ಎನ್ನುತ್ತಾರೆ.
	
ಕಠಿಣಶಿಕ್ಷೆಗೆ ಗುರಿಮಾಡಬಹುದಾದ ಅಪರಾಧಗಳನ್ನು ಮನುಷ್ಯ ಏಕೆ ಮಾಡುತ್ತಾನೆ? ಅದು ಅವನ ಹುಟ್ಟುಗುಣವೆ? ಕಲಿತಬುದ್ಧಿಯೆ? ವಿವೇಚನೆ ಇಲ್ಲದೆ ಅಥವಾ ಸನ್ನಿವೇಶದಿಂದ (ಬಡತನ) ಪ್ರಚೋದಿಸಲ್ಪಡುತ್ತಾನೆಯೆ? ಒಮ್ಮೆ ಶಿಕ್ಷೆ ಅನುಭವಿಸಿದ ಅನಂತರ ಆತ ಸತ್ಪ್ರಜೆಯಾಗುವ ಸಂಭವ ಶೇಕಡ ಎಷ್ಟು? ಈ ಪ್ರಶ್ನೆಗಳಿಗೆ ಆಧಾರಪೂರ್ವಕ ಉತ್ತರ ಪಡೆಯುವ ಪ್ರಯತ್ನ ಅಪರಾಧಮನಶ್ಯಾಸ್ತ್ರದ ಬೆಳೆವಣಿಗೆಗೆ ಕಾರಣವಾಯಿತು. ಮೇಲಾಗಿ ಜನತೆಯ ರಕ್ಷಣೆ ಮತ್ತು ಅಪರಾಧಿಯ ಉದ್ಧಾರ ಈ ಎರಡು ಧ್ಯೇಯಗಳನ್ನು ಸಾಧಿಸುವುದು ಸಮಾಜದ ಕರ್ತವ್ಯ. ಇದಕ್ಕೆ ಅಪರಾಧಮನಶ್ಶಾಸ್ತ್ರದ ಅರಿವು ಅವಶ್ಯ.
	
ಕಳ್ಳತನ, ಮನೆ ನುಗ್ಗಿ ಅಥವಾ ಮೇಲೆ ಬಿದ್ದು ದರೋಡೆ ಮಾಡುವುದು, ಕೊಲೆ, ಮಾನಭಂಗ-ಇವು ಕಾನೂನಿನ ಗುರುತರ ಉಲ್ಲಂಘನೆಗಳು. ನಾನಾ ಪ್ರಚೋದನೆಗಳಿಂದಾಗಿ ಮನುಷ್ಯ ಈ ಕೃತ್ಯಗಳನ್ನೆಸಗುತ್ತಾನೆ. ಸೇಡು, ಅಸೂಯೆ, ಹಗೆ, ಪೂರ್ವ ಗ್ರಹ-ಇವು ವ್ಯಕ್ತಿಯನ್ನು ಭಾರಿ ಕೇಡಿಯನ್ನಾಗಿ ಮಾಡಬಲ್ಲುವು. ಆದರೆ ಈ ಪ್ರಚೋದನೆಗಳಿಂದಾಗಿ ಎಲ್ಲರೂ ಭಾರಿ ಕೇಡಿಗಳಾಗುವುದಿಲ್ಲ. ಯಾವ ಬಗೆಯ ವ್ಯಕ್ತಿಗಳು ಈ ಕಾರಣಗಳಿಗೆ ಬಲಿಯಾಗಿ ಅಪರಾಧಿಗಳಾಗುತ್ತಾರೆಂಬ ವಿಷಯ ಪರಿಶೀಲನಾರ್ಹವಾದುದು.
	
ಅಪರಾಧ ಮಾಡುವುದು ವಂಶಪಾರಂಪರ್ಯವಾಗಿ ಬಂದುದಲ್ಲ. ವಂಶಪಾರಂಪರ್ಯವಾದ ಕೆಲವು ವೈಯಕ್ತಿಕ ಲಕ್ಷಣಗಳು ಅಪರಾಧ ಮಾಡಲಿಕ್ಕೆ ಸಹಕಾರಿ. ಉದಾ: ಮಂಕುಬುದ್ಧಿ. ಇದು ಹುಟ್ಟುಗುಣ. ಮಂಕುಬುದ್ದಿಯೇ ಅಪರಾಧಕ್ಕೆ ಕಾರಣವಲ್ಲದಿದ್ದರೂ ಅದು ಅಪರಾಧಕ್ಕೆ ಸಹಕಾರಿ. ಮಂಕುಬುದ್ಧಿಯವ ಅಪರಾಧದ ಫಲಿತಾಂಶಗಳನ್ನು ಮುಂದಾಗಿ ಆಲೋಚನೆ ಮಾಡಲಾರ ಯಾವುದು ಸರಿ, ಯಾವುದು ತಪ್ಪು ಎಂಬ ವಿವೇಕ ಸಹ ಅವನ ಬುದ್ಧಿಯ ಮಟ್ಟಕ್ಕೆ ನಿಲುಕಲಾರದ್ದು. ಮಂಕು ಹುಡುಗ ಎಲ್ಲರ ಕುಚೋದ್ಯ ಮತ್ತು ಅನಾದರಣೆಗೆ ಗುರಿಯಾಗುತ್ತಾನೆ. ಅವನಿಗಾಗುವ ಮನೋವೇದನೆ ಮತ್ತು ಭಾವೋದ್ರೇಕಗಳಿಂದಾಗಿ, ಪಳಗಿದ ಮತ್ತು ಚತುರರಾದ ಅಪರಾಧಿಗಳಿಗೆ ನೇರವಾಗಿ ಅವರಿಂದ ತನಗೆ ದೊರೆಯುವ ಸ್ಥಾನಮಾನಗಳಿಂದ ಸಂತುಷ್ಟನಾಗಬಹುದು. ಸೆರೆಮನೆಯಲ್ಲಿರುವ ಅಪರಾಧಿಗಳಲ್ಲಿ ಹೆಚ್ಚು ಜನ ಬುದ್ಧಿ ಮಂಕರು.
	
ಮೂರ್ಛಾರೋಗಪೀಡಿತರಾದ ಮಕ್ಕಳು ಒಂದು ಬಗೆಯ ಅನಾದರಣೆ ಮತ್ತು ಜುಗುಪ್ಸೆಗೆ ಗುರಿಯಾಗುವರು. ಇಲ್ಲವೆ, ಅವರ ಶೋಚನೀಯಸ್ಥಿತಿಯಿಂದಾಗಿ ಹಿರಿಯರು ಯಾವ ಕಟ್ಟುಕಟ್ಟಳೆಗಳನ್ನೂ ಅವರಿಗೆ ವಿಧಿಸುವುದಿಲ್ಲ. ಮುಂದೆ ಅವರು ಸ್ವಾರ್ಥಿಗಳೂ ಮುಂಗೋಪಿಗಳೂ ಹಿಂಸಾತ್ಮಕರೂ ಆಗಬಹುದು. ಅಪರಾಧಿಗಳಲ್ಲಿ ಈ ಗುಂಪಿಗೆ ಸೇರಿದವರನ್ನೂ ಕಾಣಬಹುದು.
	
ಮದ್ಯಸೇವನೆ ಮತ್ತು ಉನ್ಮಾದಗಳಿಂದಾಗಿ ಅಪರಾಧ ಸಂಭವಿಸುವುದೆಂಬ ಒಂದು ನಂಬಿಕೆಯುಂಟು. ಆದರೆ ಈ ಅಂಶಗಳು ನೇರವಾಗಿ ಅಪರಾಧಕ್ಕೆ ಎಡೆ ಕೊಡುವುದಿಲ್ಲ. ಮಿರಿಮೀರಿದ ಮದ್ಯಸೇವನೆ ಮಾಡುವ ಮನುಷ್ಯ ಮರ್ಯಾದೆಗೆಟ್ಟು ಹತೋಟಿಮೀರಿದ ಕೀಳು ಜೀವನಕ್ಕೆ ಇಳಿಯಬಹುದು. ಹಾಗೆ ಭಾವೋದ್ರೇಕಗೊಂಡಾಗ ಸಹನೆ ಮೀರಿದಾಗ ಶಿಸ್ತು ಪರಿಪಾಲಿಸಲಾರ. ಕಾರಾಗೃಹದಲ್ಲಿರುವ ಅಪರಾಧಿಗಳಲ್ಲಿ ಸುಮಾರು 16% ಮಂದಿ ವಿವಿಧ ರೀತಿಯ ಉನ್ಮಾದಸ್ಥಿತಿಗಳಿಗೆ ತುತ್ತಾಗಿರುವರೆಂದು ಪರಿಶೋಧನೆಗಳು ತೋರಿಸಿಕೊಟ್ಟಿವೆ. ಆದರೆ ಉನ್ಮತ್ತಸ್ಥಿತಿಯಲ್ಲಿರುವ ವ್ಯಕ್ತಿಗಳು ಹಿಂಸಾಕೃತ್ಯಗಳನ್ನು ಮಾಡಿ ಅಪರಾಧಿಗಳಾಗುವರು. ವಿಚ್ಛಿನ್ನವ್ಯಾಧಿಗೆ (ಸ್ಕಿeóÉೂೀಫ್ರೇನಿಯ) ಒಳಪಟ್ಟಿರುವವರು ಸಾಮಾನ್ಯಜೀವನದಿಂದ ವಿಮುಕ್ತರಾಗಿ ಮನೆ ಬಿಟ್ಟು ಓಡಿಹೋಗುವುದು, ಸಣ್ಣಪುಟ್ಟ ಕಳ್ಳತನಗಳನ್ನು ಮಾಡುವುದು ಮುಂತಾದ ಕೆಲಸಗಳಲ್ಲಿ ತೊಡಗಿ ಜೀವನದಲ್ಲಿ ಆಸಕ್ತಿ ಕಳೆದುಕೊಂಡು ಅಪರಾಧ ಮಾಡುವವರು ಸ್ಥಿರಭ್ರಮವಿಕೃತಿಯನ್ನು ಹೊಂದಿರುವವರು (ಪ್ಯಾರಾನಾಯಿಗ್) ನೆಂಟರಲ್ಲೂ ಸಹ ಪಾಠಿಗಳಲ್ಲೂ ಅನುಮಾನವನ್ನಿಟ್ಟುಕೊಂಡು ಅವರೆಲ್ಲರೂ ತಮ್ಮನ್ನು ಪೀಡಿಸುವರೆಂದು ಭಾವಿಸಿ ಹಿಂಸಾಕೃತಿಗಳನ್ನು ಮಾಡುವರು. ಇಂಥ ಪ್ರಬಲ ಮನೋರೋಗಗಳನ್ನುಳ್ಳ ಅಪರಾಧಿಗಳನ್ನು ಸೆರೆಮೆನೆಯಲ್ಲಿ ಇಟ್ಟರೆ ಅವರನ್ನು ತಿದ್ದುವುದಕ್ಕೆ ಆಗುವುದಿಲ್ಲ.
	
ಸುಮಾರು 20% ಅಪರಾಧಿಗಳು ಮಂದಬುದ್ಧಿಯುಳ್ಳವರೋ ಪ್ರಬಲ ಮನೋರೋಗಗಳಿಂದ ಪೀಡಿತರೋ ಆಗಿದ್ದರೂ ಇನ್ನುಳಿದ 80% ಅಪರಾಧಿಗಳು ಸಾಮಾನ್ಯ ಮನೋಧರ್ಮವನ್ನುಳ್ಳವರಾಗಿರುವರು. ಇವರು ಯಾವ ಕಾರಣದಿಂದ ಅಪರಾಧಿಗಳಾಗುವರು ಎಂಬುದನ್ನು ಕಂಡುಹಿಡಿಯಲು ಅನೇಕ ಪರಿಶೋಧನೆಗಳನ್ನು ನಡೆಸಲಾಗಿದೆ. ಆದರೆ ಯಾವ ಒಂದು ಕಾರಣದಿಂದ ಒಬ್ಬ ವ್ಯಕ್ತಿ ಅಪರಾಧಿಯಾಗುವನೆಂದು ಹೇಳಲಸಾಧ್ಯ. ನಾಲ್ಕಾರು ಕಾರಣಗಳ ಪ್ರಭಾವ ಜೊತೆಗೂಡಿ ಅಪರಾಧಕ್ಕೆ ಕಾರಣರಾಗಬಹುದು.
	
ಅಪರಾಧಿ ಎಂದರೆ ಸಾಧಾರಣವಾಗಿ ಸಾಮಾಜಿಕ ಕಟ್ಟುನಿಟ್ಟುಗಳನ್ನು ಒಪ್ಪಿಕೊಳ್ಳದೆ ದೇಶದ ಕಾನೂನಿಗೆ ವಿರುದ್ಧವಾಗಿ ನಡೆದು ಪೋಲೀಸರ ವಶಕ್ಕೆ ಸಿಕ್ಕಿಕೊಳ್ಳುವವನು ಎಂದರ್ಥ. ಪ್ರತಿಯೊಂದು ಕುಟುಂಬದಲ್ಲೂ ತಂದೆತಾಯಿಯರು ಮಕ್ಕಳಿಗೆ ಕುಟುಂಬದ ಮತ್ತು ಸಮಾಜದ ಕಟ್ಟುನಿಟ್ಟುಗಳಿಗೆ ಹೊಂದಿಕೊಂಡು ಬದುಕುವಂತೆ ದಾರಿತೋರುವರು. ಆದರೆ ಕೆಲವು ಸಮಯಗಳಲ್ಲಿ ಒಂದು ಮಗು ಕಟ್ಟುನಿಟ್ಟುಗಳನ್ನು ಗಮನಿಸದೆ, ಮನಸ್ಸಿಗೆ ತೆಗೆದುಕೊಳ್ಳದೆ ಹೋಗಬಹುದು. ಅಂಥ ಮಗುವಿಗೆ ತಾನು ಮಾಡುತ್ತಿರುವ ತಪ್ಪಿನ ಅರಿವೇ ಇರುವುದಿಲ್ಲ. ಅಲ್ಲದೆ ಕುಟುಂಬದ ಅಥವಾ ಒಂದು ಸಣ್ಣ ಗುಂಪಿನ ಕಟ್ಟುನಿಟ್ಟುಗಳಿಗೂ ಇಡೀ ಸಮಾಜದ ಕಟ್ಟುನಿಟ್ಟುಗಳಿಗೂ ಅಂತರವಿದ್ದು ಒಬ್ಬ ವ್ಯಕ್ತಿ ಸಣ್ಣಗುಂಪಿನ ಕಟ್ಟುನಿಟ್ಟಿನ ಅನುಸಾರವಾಗಿ ನಡೆದುಕೊಂಡರೂ ದೊಡ್ಡ ಸಮಾಜದ ಕಟ್ಟುನಿಟ್ಟುಗಳಿಗೆ ವಿರುದ್ಧವಾಗಿ ನಡೆಯಬಹುದು. ಮತ್ತು ಭಾವೋದ್ರೇಕಗಳ ಮೇಲೆ ಹತೋಟಿ ಇಲ್ಲದ ವ್ಯಕ್ತಿ ವಿಪರೀತವಾದ ಭಯ, ಕೋಪ, ಅಸೂಯೆಗಳಿಂದ ಅನೇಕ ಅಪರಾಧಗಳನ್ನು ಎಸಗಬಹುದು. ವ್ಯಕ್ತಿಯಲ್ಲಿ ಬೆಳೆವಣಿಗೆ ಸರಿಯಾಗಿ ಮುಂದುವರಿಯದೆ ಹೋದಾಗಲೂ ಆತನ ವ್ಯಕ್ತಿತ್ವ ಕೆಟ್ಟು, ಸಮನ್ವಯ ತಪ್ಪಿ ಆತ ಇಚ್ಛಾನುಸಾರ ವರ್ತಿಸಿ ಕಾನೂನನ್ನು ಉಲ್ಲಂಘಿಸಬಹುದು.
	
ಒಬ್ಬ ಮನುಷ್ಯನಿಗೆ ಕಾಯಿಲೆ ಬಂದರೆ ವೈದ್ಯರು ಕಾಯಿಲೆ ಯಾವುದೆಂದು ಗುರುತಿಸಿ ಅದಕ್ಕೆ ಅನುಗುಣವಾದ ಔಷಧಿ ಆಹಾರಗಳನ್ನು ನಿಯಮಿಸಿ ರೋಗದಿಂದ ಪಾರಾಗಲು ಸಹಾಯಮಾಡುವರಷ್ಟೆ. ಅದೇ ರೀತಿ ಅಪರಾಧಿಗಳ ಮನೋಧರ್ಮಗಳನ್ನು ತಿಳಿದು ಪ್ರತಿಯೊಬ್ಬ ಅಪರಾಧಿಗೂ ತಕ್ಕ ಪರಿಹಾರವನ್ನು ನಿಯಮಿಸಿದರೆ ಆತ ಸತ್ಪ್ರಜೆಯಾಗಲು ಸಾಧ್ಯ.
	
ಆದರೆ ಎಲ್ಲ ಸಮಾಜಗಳಲ್ಲೂ ಅಪರಾಧಿಗಳನ್ನು ಕಂಡರೆ ಭಯ, ಕ್ರೋಧ, ಜುಗುಪ್ಸೆ ಮುಂತಾದ ಭಾವೋದ್ರೇಕಗಳೇ ಹೆಚ್ಚು. ನ್ಯಾಯಾಧೀಶರೋ ಅಪರಾಧಿಗಳನ್ನು ದೇಶದ ಕಾನೂನಿನ ಪ್ರಕಾರ ಶಿಕ್ಷಿಸುವರು. ಕಾರಾಗೃಹಶಿಕ್ಷೆ ಅಪರಾಧಿಯನ್ನು ತಿದ್ದುವುದಕ್ಕೆ ಬದಲು ಅವನ ಮನಸ್ಸಿನಲ್ಲಿನ ಕೋಪ, ಕ್ರೋಧಗಳನ್ನು ಕೆರಳಿಸುವ ಸಂದರ್ಭಗಳೇ ಹೆಚ್ಚು. ಕಾರಾಗೃಹದಿಂದ ಹೊರಗೆ ಬಂದಾಗ ಸಮಾಜದ ಮೇಲೆ ತನಗಿರುವ ಸೇಡನ್ನು ತೀರಿಸಿಕೊಳ್ಳುವುದಕ್ಕೋಸ್ಕರ ಮತ್ತೊಮ್ಮೆ ಆತ ಅಪರಾಧವನ್ನೆಸಗಲೂಬಹುದು.
	
ಅದುದರಿಂದ ಕಾರಾಗೃಹದಲ್ಲಿ ಶಿಕ್ಷೆಗೆ ಬದಲು ಶಿಕ್ಷಣಕ್ರಮಗಳನ್ನು ಕೈಗೊಂಡರೆ ಅಪರಾಧಿಗಳಿಗೆ ತಕ್ಕ ತರಪೇತನ್ನು ಕೊಟ್ಟು ಸತ್ಪ್ರಜೆಯನ್ನಾಗಿ ಮಾಡಲು ಸಾಧ್ಯವಾಗುವುದು. ಅದರಲ್ಲೂ ಬಾಲಾಪರಾಧಿಗಳ ವಿಷಯದಲ್ಲಿ ಶಿಕ್ಷೆ ವಿಧಿಸುವಾಗ ಬಹಳ ಎಚ್ಚರಿಕೆಯಿಂದಿರಬೇಕಾಗುತ್ತದೆ. ಬಹುಮಟ್ಟಿನ ಅಪರಾಧಗಳಿಗೆ ವ್ಯಕ್ತಿಗಳ ಮನೋಧರ್ಮ, ಪರಿಸರ, ಬಡತನ ಹಾಗೂ ಪ್ರತೀಕಾರ ಬುದ್ಧಿಗಳೇ ಕಾರಣವಾಗಿರುವುದರಿಂದ ಅಪರಾಧಿಗೆ ಶಿಕ್ಷೆ ಕೊಡುವುದರ ಜೊತೆಗೆ ಸಾಮಾಜಿಕವಾಗಿ ಉತ್ತಮ ಪರಿಸರವನ್ನೇರ್ಪಡಿಸುವುದು ಮತ್ತು ಜೀವನೋಪಾಯವನ್ನು ಕಲ್ಪಿಸುವುದು-ಇಂಥ ಸುಧಾರಣೆಗಳನ್ನು ಮಾಡಬೇಕೆಂಬುದರ ಅಗತ್ಯವನ್ನು ಈಚಿನ ಅಪರಾಧಮನಶ್ಶಾಸ್ತ್ರದ ಅಧ್ಯಯನ ಒತ್ತಿ ಹೇಳುತ್ತದೆ.
(ನೋಡಿ- ಅಪರಾಧಶಾಸ್ತ್ರ)
(ನೋಡಿ- ಬಾಲಾಪರಾಧ)									 
    
(ಎನ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ